;?
ದುಡ್ಡು ಮಾಡುವ ಬಯಕೆಯಿಂದ ಬೇಸಿಗೆ ಶಿಬಿರ ಸಂಘಟಿಸುವ ಮಂದಿ, ಮಕ್ಕಳ ಮನಸ್ಸನ್ನು ಕಸಿವಿಸಿಗೊಳಿಸುತ್ತಾರೆ. ಬೇಸಿಗೆ ಶಿಬಿರಗಳಲ್ಲಿ ನಿಜಕ್ಕೂ ಏನು ನಡೆಯುತ್ತಿದೆ? ಇಷ್ಟಕ್ಕೂ ನಮ್ಮ ಮಕ್ಕಳಿಗೆ ಇಂಥದ್ದೊಂದು ಶಿಬಿರದ ಅಗತ್ಯತೆ ಇದೆಯೇ?
ನಾನು ಸುಮಾರು ದಿನಗಳಿಂದ ಮನೆಗೆ ಬರುವ ದಿನಪತ್ರಿಕೆಗಳನ್ನು ಗಮನಿಸುತ್ತಿದ್ದೇನೆ. ಪತ್ರಿಕೆಗಳೊಂದಿಗೆ ದಿನ ನಿತ್ಯ ಬಣ್ಣ ಬಣ್ಣದ ಕರ ಪತ್ರಗಳು ಮನೆ ಸೇರುತ್ತಿವೆ. ಅದರಲ್ಲೂ ಈ ಮಾರ್ಚ್-ಏಪ್ರಿಲ್ ಎಂದರೇ ಸಾಕು, ಬೇಸಿಗೆ ಶಿಬಿರದ ಕರಪತ್ರಗಳದೇ ಮಹಾಪೂರ.
ರಜಾದಿನದ ಸದುಪಯೋಗದ ಬಗ್ಗೆ, ನಗರದ ಪ್ರತಿಷ್ಠಿತ ಸಂಸ್ಥೆಗಳು ಈ ಶಿಬಿರಗಳ ಸಂಘಟಿಸಿರುವ ಬಗ್ಗೆ ನಾನಾ ಪ್ರಚಾರ ಇರುತ್ತದೆ. ಮಕ್ಕಳಿಗೆ ಅದರಲ್ಲೂ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಇಂತಹ ಶಿಬಿರಗಳು ಬೇಕೆ? ಎಂಬುದು ಬಹುಮುಖ್ಯವಾದ ಪ್ರಶ್ನೆ.
ವರ್ಷವಿಡೀ ಪುಸ್ತಕಗಳ ಹುಳುಗಳಾಗಿ, ಬೆನ್ನು ಬಾಗುವಷ್ಟು ಪುಸ್ತಕಗಳನ್ನು ಪ್ರತಿದಿನ ಶಾಲೆಗೆ ಹೊತ್ತು, ಹೋಮ್ವರ್ಕ್ ದೆಸೆಯಿಂದ ಕಂಗೆಟ್ಟ ಮಕ್ಕಳು, ಬೇಸಿಗೆಯ ರಜೆಯ ಸವಿಯನ್ನು ಸವಿಯುವ ಉತ್ಸಾಹ ವರ್ಣಿಸಲು ಸಾಧ್ಯವಿಲ್ಲ ಬಿಡಿ. ಅದನ್ನು ಮಕ್ಕಳಾಗಿ ಅನುಭವಿಸುವವರಿಗೆ ಗೊತ್ತು.

ಈ ಬೇಸಿಗೆ ರಜೆ ಸಂದರ್ಭವನ್ನು ಹಲವು ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ಹಣ ಮಾಡುವ ದಂಧೆಗೆ ಬಳಸಿಕೊಳ್ಳುತ್ತಾರೆ. ಈ ಶಿಬಿರಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರು, ‘ಬಾಣಲೆಯಿಂದ ಬೆಂಕಿಗೆ ಹಾಕಿದಂತೆ’ ಎಂಬಂತೆ ಮಕ್ಕಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ಈ ಉರಿ ಬಿಸಿಲಿನಲ್ಲಿ ಮಕ್ಕಳ ಮನಸ್ಸು ಶಿಕ್ಷಣದ ಕಡೆಗೆ ಸಮರ್ಪಕವಾಗಿ ಬರುವುದಿಲ್ಲ ಎಂದು ಅರಿತ ಸರ್ಕಾರ, ಹಿಂದಿನಿಂದಲೂ ರಜೆ ಪದ್ಧತಿಯನ್ನು ಮುಂದುವರೆಸಿದೆ. ಈ ರಜೆ ವರ್ಷವಿಡೀ ದಣಿದ ಮನಗಳಿಗೆ ಒಂದು ವಿರಾಮ. ಮುಂದಿನ ಓದಿನ ಆರಂಭಕ್ಕೆ ಒಂದು ಒಳ್ಳೆಯ ಬ್ರೇಕ್.
ರಜಾ-ಮಜಾ ಎನ್ನುವುದನ್ನು ನಮ್ಮ ಹಳ್ಳಿಗಾಡಿನ ಮಕ್ಕಳನ್ನು ನೋಡಿದರೆ ತಿಳಿಯುತ್ತದೆ. ಹಳ್ಳಿಯ ಮಗು ಈ ರಜಾದಿನವನ್ನು ತನ್ನ ಮನೆ ಮತ್ತು ತನ್ನ ಸುತ್ತಲಿನ ಗೆಳೆಯರೊಂದಿಗೆ ಕಳೆಯುತ್ತದೆ. ಗಿಡ-ಮರಗಳ ಮಧ್ಯೆ ತನ್ನ ಹಿರಿಯರೊಂದಿಗೆ ಹೊಲಗಳಿಗೆ ಹೋಗುವುದು, ನಾನಾರೀತಿ ಆಟಗಳ ಮೂಲಕ ಹಳ್ಳಿ ಮಕ್ಕಳು ಬೇಸಿಗೆ ರಜೆಯ ಸವಿಯನ್ನು ಅನುಭವಿಸುತ್ತಾರೆ. ಗ್ರಾಮೀಣ ಆಟಗಳಾದ ಕುಂಟ ಬಿಲ್ಲೆ, ಮಣಿ ಆಟ, ಲಗೋರಿ, ಚಿನ್ನಿದಾಂಡು, ಐಸ್ ಪೈಸ್, ಕಣ್ಣಮುಚ್ಚಾಲೆ, ಬುಗುರಿ ಆಟ, ಈಜುವುದು ಇವೆಲ್ಲವೂ ಮಕ್ಕಳಿಗೆ ಖುಷಿ ತರುತ್ತವೆ.
ಇದಲ್ಲದೆ ಹಿರಿಯರ ಪದ್ಧತಿಯನ್ನು, ಜವಾಬ್ದಾರಿಯನ್ನು ಮಕ್ಕಳು ಅನುಸರಿಸುತ್ತವೆ. ತಮ್ಮ ಬಿಡುವಿನ ಸಮಯದಲ್ಲಿ ಗೊಂಬೆಗಳಿಗೆ ಮದುವೆ ಮಾಡಿಸುವುದು, ಅಡಿಗೆ ಮಾಡುವುದು, ಹಬ್ಬಗಳ ಆಚರಣೆ, ಮರಳಲ್ಲಿ ಮನೆ, ಗುಡಿಸಲು ಕಟ್ಟುವುದು, ಬಯಲಾಟದ ಪಾತ್ರಗಳನ್ನು ತಮ್ಮದೇ ರೀತಿಯಲ್ಲಿ ಬಣ್ಣ ಬಳಿದುಕೊಂಡು ಅಭಿನಯಿಸುವುದು, ತಾವು ನೋಡಿರುವ ಬಸ್,ಜೀಪು ಗಳ ಪ್ರತಿಕೃತಿಗಳನ್ನು ತಮ್ಮ ಸುತ್ತ ಮುತ್ತ ಸಿಗುವ ವಸ್ತುಗಳಿಂದ ರಚಿಸುವುದಕ್ಕೆ ಮಕ್ಕಳು ಮುಂದಾಗುತ್ತಾರೆ. ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಅಲ್ಲಿ ರೂಪುಗೊಳ್ಳುತ್ತದೆ.
ಹಳ್ಳಿ ಮಕ್ಕಳ ಸುಖ, ನಗರದ ಮಕ್ಕಳಿಗೆ ಸಿಕ್ಕುವುದಿಲ್ಲ. ನಗರದ ಬೇಸಿಗೆ ಶಿಬಿರದಲ್ಲಿನ ಕೃತಕ ಪರಿಸರದಲ್ಲಿ ಮಕ್ಕಳು ಬಳಲುತ್ತವೆ. ಶಕ್ತಿ ಮತ್ತು ಅಸಕ್ತಿಯ ವಿರುದ್ಧವಾಗಿ, ಏನೆನೋ ಮಾಡಲು ಹೋಗಿ, ಕಲಿಯಲು ಹೋಗಿ ಎಡವುತ್ತಾರೆ. ಅಜ್ಜ-ಅಜ್ಜಿ ಜೊತೆ ಬೆರೆಯುವುದು, ಹತ್ತಿರದಲ್ಲಿರುವ ನೆಂಟರ ಊರುಗಳಿಗೆ ಹೋಗುವುದು ನಗರದ ಮಕ್ಕಳನ್ನು ಕಡಿಮೆಯಾಗಿದೆ. ಹೀಗಾಗಿ ಸಮನ್ವಯತೆ ಕಡಿಮೆಯಾಗಿದೆ.
ಇಂದು ನಗರದ ನಮ್ಮ ಹೈಟೆಕ್ ಜೀವನದಲ್ಲಿ ನಮ್ಮ ಎಲ್ಲಾ ಸಂಭ್ರಮಗಳಲ್ಲೂ ಏಕತಾನತೆ ಇದೆ. ನಮ್ಮ ಅಮೂಲ್ಯ ಸಮಯವನ್ನು ಟಿ.ವಿ., ಕಾರ್ಟೂನ್, ರಕ್ತಕಾರುವ ಭಯಾನಕ ಸಿನಿಮಾಗಳ ಸಿಡಿ ಮತ್ತು ಡಿವಿಡಿಗಳು ತಿಂದಿವೆ. ವಿಡಿಯೋಗೇಮ್ಗಳಲ್ಲಿ ಅಥವಾ ಸೈಬರ್ ಕೆಫೆಗಳಲ್ಲಿ ನಮ್ಮ ಬದುಕು ಮುಗಿದು ಹೋಗುತ್ತಿದೆ. ಅಂತರ್ಜಾಲದಲ್ಲಿ ಸಮಯ ಸವೆಸುವ ಪ್ರವೃತ್ತಿ ಹೆಚ್ಚುತ್ತಿದೆ.
ಈ ಎಲ್ಲದರ ಮಧ್ಯೆ ಮಕ್ಕಳಿಗೆ ಮುದ ನೀಡುವ ಬೇಸಿಗೆ ಶಿಬಿರ ಸಂಘಟಿಸುವತ್ತ ಪ್ರಯತ್ನಗಳು ನಡೆಯಬೇಕಿವೆ.
ಮುಖಪುಟ /
ಸಾಹಿತ್ಯ-ಸಂಸ್ಕೃತಿ