
ಈ ಹೆಸರೀಗ ಮರೆತ ಮಾತು. ಈ ಮೂರು ಪದಗಳು ಸೇರಿ ಆದ ಕುವೆಂಪು ಮನೆ ಮಾತು. ಕನ್ನಡಕ್ಕೆ ಮೊದಲ ಜ್ಞಾನ ಪೀಠ ತಂದುಕೊಟ್ಟ ಕವಿ ಎಂಬ ಹೆಗ್ಗಳಿಗೆ ಭಾಜನರಾದವರು ಕುವೆಂಪು.
*ಸತ್ಯವ್ರತ ಹೊಸಬೆಟ್ಟು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ತಂದೆ ವೆಂಕಟಪ್ಪನವರ ಊರು. ಕುವೆಂಪು ಹುಟ್ಟಿದ್ದು ತಾಯಿಯ ತವರಾದ ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆ ಗ್ರಾಮದಲ್ಲಿ . ಪ್ರಾಥಮಿಕ ಮತ್ತು ಇತರ ವಿದ್ಯಾಭ್ಯಾಸಗಳು ಸ್ಕೂಲಿನಲ್ಲಿ , ವಿಶ್ವ ವಿದ್ಯಾಲಯದಲ್ಲಿ ನಡೆದರೂ ಕುವೆಂಪು ಅವರಿಗೆ ಭಾವುಕತೆಯ ಪಾಠ ಕಲಿಸಿದ್ದು ಪ್ರಕೃತಿ. ನಿಸರ್ಗವೇ ಅವರ ಪಾಠ ಶಾಲೆ. ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ ಮಲೆಯ ನಾಡಿಗೆ ಮಳೆಯ ಬೀಡಿಗೆ. ಎಂದು ಅವರು ಬರೆದಿದ್ದರೆ ಅದಕ್ಕೆ ಮಲೆನಾಡಿನ ಸೆಳೆತವೇ ಕಾರಣ. ಅವರ ಕವಿತೆಗಳಲ್ಲಿ , ಎರಡು ಕಾದಂಬರಿಗಳಲ್ಲಿ , ಸಣ್ಣ ಕತೆಗಳಲ್ಲಿ ಕಾಡು, ಮಲೆನಾಡು ಒಂದು ಪಾತ್ರವಾಗಿ ಬರುತ್ತದೆ. ನಿಸರ್ಗದ ನಿಗೂಢತೆ ಹಾಗೂ ವಿಸ್ಮಯತೆಗಳು ಅವರಿಗೆ ಸದಾ ಸ್ಫೂರ್ತಿ ನೀಡುತ್ತಿದ್ದವು ಅನ್ನುವುದಕ್ಕೆ ಮಲೆಗಳಲ್ಲಿ ಮದುಮಗಳು ಹಾಗೂ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಗಳೇ ಸಾಕ್ಷಿ.
ಕುವೆಂಪು ಅವರನ್ನು ರೂಪಿಸಿದ್ದು ಪ್ರಕೃತಿ ಮಾತ್ರವಲ್ಲ . ಮೈ ಸೂರಿನ ಪುರುಷರ ಪಾತ್ರವೂ ಅಲ್ಲಿದೆ. ತಳುಕಿನ ವೆಂಕಣ್ಣಯ್ಯ, ಬಿ.ಎಂ.ಶ್ರೀ, ಎ.ಆರ್. ಕೃಷ್ಣ ಶಾಸ್ತ್ರಿಗಳ ಅಚ್ಚು ಮೆಚ್ಚಿನ ಶಿಷ್ಯರಾಗಿ ಕುವೆಂಪು ಕಲಿತವರು. ಎಂ.ಎ. ಪಾಸು ಮಾಡಿ, ಮಹಾರಾಜ ಕಾಲೇಜಿನಲ್ಲೇ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸುವ ಕುವೆಂಪು ಅಲ್ಲಿ ಇಪ್ಪತ್ತಾರು ವರುಷ ಸೇವೆ ಸಲ್ಲಿಸುತ್ತಾರೆ. ಈ ನಡುವೆ ಕಲ್ಕತ್ತಾಗೆ ಹೋಗಿ ವಿವೇಕಾನಂದರ ವಿಚಾರ ಧಾರೆಗಳಿಂದ ಪ್ರಭಾವಿತರಾಗಿ ನಿಸ್ಸಂಗದತ್ತ ಅವರ ಮನ ತುಡಿಯುತ್ತದೆ. ಹೀಗೆ ಪ್ರಕೃತಿ ಹಾಗೂ ಅದರ ಗೂಢತೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ತಾತ್ವಿಕ ಚಿಂತನೆ ಎರಡೂ ಅವರಿಗೆ ಅವರಿಗೆ ದಕ್ಕುತ್ತದೆ. ಕುವೆಂಪು ಆರಂಭದಲ್ಲಿ ಇಂಗ್ಲಿಷ್ನಲ್ಲಿ ಕಾವ್ಯ ಬರೆದವರು. ಅವರ ಮೊದಲ ಕೃತಿ ಬಿಗಿವರ್ಸ್ ಮ್ಯೂಸ್ . ಅದನ್ನು ಓದಿದ ಐರಿಷ್ ಕವಿ ಜೇಮ್ಸ್ ಕಸಿನ್ಸ್ ಕನ್ನಡದಲ್ಲಿ ಬರೆಯಿರಿ ಎಂದು ಹೇಳಿದಾಗ ಕುವೆಂಪು ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡು ಕನ್ನಡದಲ್ಲಿ ಕಾವ್ಯ ರಚನೆ ಆರಂಭಿಸುತ್ತಾರೆ. ಇವೆಲ್ಲ ಬರಿ ವಿವರಗಳು ಅಷ್ಟೆ. ಈ ವಿವರಗಳಲ್ಲಿ ಕುವೆಂಪು ಇಡಿಯಾಗಿ ದಕ್ಕಲಾರರು. ಕವಿಯ ಕೃತಿಗಳ ಪರಿಚಯವನ್ನು ಯಾವ ವಿಮರ್ಶೆಯಾಗಲೀ ಪರಿಚಯವಾಗಲೀ ಮಾಡಿಕೊಡಲಾಗದು. ಹಾಗೆ ನೋಡಿದರೆ ಪೂರ್ತಿಯಾಗಿ ಓದದ ಹೊರತು ಅರಿವಿಗೆ ದಕ್ಕದ ಕವಿ ಕುವೆಂಪು. ಅವರ ಕಾದಂಬರಿಗಳೆರಡೂ ಇದುವರೆಗೆ ಬಂದ ಹತ್ತು ಅತ್ಯುತ್ತಮ ಕನ್ನಡ ಕಾದಂಬರಿಗಳ ಸಾಲಲ್ಲಿ ನಿಲ್ಲುತ್ತವೆ. ಇದೀಗ ಕಾನೂರು ಹೆಗ್ಗಡತಿಯನ್ನು ರಾಮಚಂದ್ರ ಶರ್ಮ ಅವರು
The House Of Kanooru ಎಂಬ ಹೆಸರಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಪೆಂಗ್ವಿನ್ ಇದನ್ನು ಪ್ರಕಟಿಸಿದೆ.
ಕುವೆಂಪು 1928ರಲ್ಲಿ ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಬರೆದವರು. ಅದೇ ವರ್ಷ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷರಾದವರು. 1924 ರಲ್ಲಿ ಪ್ರಕಟವಾದ ಅಮಲನ ಕತೆಯಿಂದ 1989ರಲ್ಲಿ ಅವರು ಪ್ರಕಟಿಸಿದ ಆತ್ಮ ಕತೆ ನೆನಪಿನ ದೋಣಿಯ ತನಕ ಕುವೆಂಪು 70 ಕೃತಿಗಳನ್ನು ರಚಿಸಿದ್ದಾರೆ.
ಆಯ್ದ ಕೃತಿ ಶ್ರೇಣಿ
ಮಕ್ಕಳ ಸಾಹಿತ್ಯ- ಮೋಡಣ್ಣನ ತಮ್ಮ , ಮರಿ ವಿಜ್ಞಾನಿ
ಕವನ ಸಂಕಲನ- ಪಕ್ಷಿಕಾಶಿ, ಕೊಳಲು, ಪಾಂಚಜನ್ಯ, ಚಂದ್ರಮಂಚಕೆ ಬಾ ಚಕೋರಿ
ನಾಟಕ- ರಕ್ತ ರಾತ್ರಿ , ಶೂದ್ರ ತಪಸ್ವಿ, ಬೆರಳ್ಗೆ ಕೊರಳು
ವಿಮರ್ಶೆ- ತಪೋನಂದನ, ದ್ರೌಪದಿಯ ಶ್ರೀ ಮುಡಿ
ಜೀವನ ಚರಿತ್ರೆ- ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ
ಕಥಾ ಸಂಕಲನ- ಸನ್ಯಾಸಿ ಮತ್ತು ಇತರ ಕತೆಗಳು
ಅನುವಾದ- ಗುರುವಿನೊಡನೆ ದೇವರಡಿಗೆ
ಕಾದಂಬರಿ- ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡಿತಿ
ಮಹಾ ಕಾವ್ಯ- ಶ್ರೕ ರಾಮಾಯಣ ದರ್ಶನಂ
ಪ್ರಶಸ್ತಿಗಳು
39ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ
1955 ರಾಮಾಯಣ ದರ್ಶನಂಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಪ್ರಶಸ್ತಿ
1958 ಪದ್ಮ ವಿಭೂಷಣ
1964 ರಾಷ್ಟ್ರಕವಿ ಬಿರುದು
1968ರಲ್ಲಿ ಶ್ರೀ ರಾಮಾಯಣರ್ಶನಂ ಕೃತಿಗೆ ಜ್ಞಾನಪೀಠ
1988 ಪಂಪ ಪ್ರಶಸ್ತಿ
ಕರ್ನಾಟಕ ರತ್ನ